ಜನಪದ ತ್ರಿಪದಿಗಳಲ್ಲಿ ಮೂಡಿ ಬಂದ ಮಡಿವಾಳ ಮಾಚಿದೇವರು
(ಒಟ್ಟು ೧೦೧ ತ್ರಿಪದಿಗಳು )-
==============================
ಸಂಪಾದಕರು : ಶ್ರೀ ಯುತ ಎ ಕೆ ರಾಮೇಶ್ವರ
------------------------------
ಪ್ರಕಾಶಕರು: ಕವಿರಾಜ ಮಾರ್ಗ ಪ್ರಕಾಶನ
ಮಾತೋಶ್ರಿ ಗೋದು ತಾಯಿ ನಗರ
ಜೇವರ್ಗಿ ರಸ್ತೆ ಗುಲ್ಬರ್ಗ ಜಿಲ್ಲೆ.
ಮುದ್ರಕರು ನಿಧಿ ಗ್ರಾಫಿಕ್ಸ್ ಗುಲ್ಬರ್ಗ
ದೂರವಾಣಿ :೪೫೦೯೧೩ (ಎಸ್ ಟಿ ಡಿ ಕೋಡ್-೦೮೪೭೨ )
------------------------------
ಸೌಜನ್ಯ -
ಕೃತಜ್ಞತೆ -
ಶ್ರೀ ಯುತ ಎ ಕೆ ರಾಮೇಶ್ವರ ಅವರಿಗೆ ನಮ್ಮ ಅನಂತ ಧನ್ಯವಾದಗಳು..
ಮೊದಲ ಭಾಗದಲ್ಲ್ಲಿ .....
||೧||
ಮಡಿವಾಳ ಮಾಚಯ್ಯ ಧೃಢವುಳ್ಳ ಶಿವ ಭಕ್ತ
ಮಾಡದಿಯನು ಕೊಂದು ರಗುತದಲಿ - ತಾ ತೊಳೆದ
ಒಡೆಯನೊಸ್ತಿರವ ಭಕುತಿಯಲಿ
||೨||
ಹಿಪ್ಪರಗಿ ಮರೆಯುತಲಿ ಉಪ್ಪರಗಿ ಆಗೆಂದು
ತುಪ್ಪ ಹೊಳೆಯಾಗಿ ಹರಿಯುತಲಿ - ಊರೊಳಗೆ
ಅಪ್ಪ ಮಾಚಣ್ಣ ಜನಿಸಿದನು
||೩||
ಹಿಪ್ಪರಗಿ ಶರಣನಿಗೆ ತಪ್ಪದಲೆ ಬಾಗುವೆವು
ಮುಪ್ಪಾಗದಿರಲಿ ನಮ್ಹಾಡ- ಮಾಚಯ್ಯ
ಅಪ್ಪಿ ಹಾದಿಯನು ತೋರಿಸಲಿ
||೪||
ಲಿಂಗಿಗಳು ಹಡೆದವರು ಸಂಗ ಭವಿಗಳದಲ್ಲ
ಲಿಂಗವಂತರ ಉಡುತೊಡುಗೆ -ತೊಳೆಯುತಲಿ
ಅಂಗ ಸವೆತನಕ ಕಾಯಕವು
||೫||
ಮನೆಗೆಲಸ ಮಡಿವಾಳ ದಿನಗೆಲಸ ಶಿವ ಭಕ್ತಿ
ಮನ ಬೆರೆತ ಲಿಂಗ ದೇಹದಲಿ -ಬಲು ಒಪ್ಪಿ
ಕನಕ ಜನಕಾಗಿ ಬಾಳುವೆಯು
||೬||
ಮಡಿವಾಳ ಮಾಚಣ್ಣ ಕಡುಭಕ್ತ ತಾನಾಗಿ
ಹಡೆದವರ ಕೆಲಸ ಕೈಕೊಂಡ -ಊರೊಳಗೆ
ಬಡವರಿಗೆ ಭಾಗ್ಯ ನಿಧಿಯಾದ
||೭||
ಸಂಗಯ್ಯಗ್ಹೋಗದೆ ಲಿಂಗನಿಗೆ ನೀರೆರೆಯದೆ
ಜಂಗು ಕಟ್ಟದಲೇ ಕಾಯಕವ-ಮಾಚಣ್ಣ
ಹಿಂಗಿಸನು ತನ್ನ ಕುಲಗೆಲಸ
||೮||
ಕಾಯಕವ ಪಾಲಿಸಿದ ನಾಯಕನು ವೀರನವ
ಮಾಯೆಗೊರೆಗಲ್ಲು ಮಾಚಯ್ಯ- ನಿತ್ಯದಲಿ
ಜೀಯ ವಾಸನೆಗೆ ಶಿವಶರಣ
||೯||
ಕಾಯಕವೇ ಕತ್ಯಾಗಿ ಘಾಯ ಮಾಡುತ ಹೊರಟ
ರಾಮರಾಯರೆಲೆ ನಡುಗಿದರು -ಮಾಚನಿಗೆ
ನ್ಯಾಯ ಸಹ ನಡುಗಿ ಸಭೆಯೊಳಗೆ
||೧೦||
ಎಂಟು ಕಟ್ಟುಗಳರಿತ ಬಂಟ ಮಾಚನೆ ಹೌದು
ನೆಂಟನವ ಹೌದು ವಾದಿಗಳ-
ಪರ ಮತಕೆ
ಕಂಟಕವೇ ಹೌದು ಸಭೆಯೊಳಗೆ
||೧೧|
ಆರು ತಳಗಳ ಬಿಚ್ಚಿ ಬೀರಿದನು ಜಗಕೆಲ್ಲ
ಕಾರಗತ್ತಲೆಯು ಬೆಳಗಾಗಿ - ಶಿವ ಮತಕೆ
ಸಾರು ದೀವಟಿಗೆ ತಾನಾಗಿ
||೧೨||
ಪರ ಮಠದ ವಾದಿಗಳು ಥರ ಥರಾನೆ ನಡುಗುತಲಿ
ಸೊರಗಿ ಪಾದಕ್ಕೆ ಬೀಳುತಲಿ- ಮಾಚಯ್ಯನಿಗೆ
ಕರುಣಿಸಿರಿ ಗುರುವೇ ಎನ್ನುತಲಿ
||೧೩||
ವೀರಭದ್ರನೆ ಅಂದು ವೀರ ಮಡಿವಾಳಾಗಿ
ಸಾರುತಲಿ ವೀರ ಧರ್ಮವನೆ- ಜಗಕೆಲ್ಲ
ತೋರಿದನು ಮುಕ್ತಿ ಮಾರ್ಗವನು
||೧೪||
ಹಿಪ್ಪರಗಿ ಹಾರುವರು ಕಪ್ಪ ಕಾಣಿಕೆ ಹೊತ್ತು
ಗಪ್ಪ ಬರುತಿಹರು ಮಾಚನಿಗೆ- ಕೈ ಮುಗಿದು
ಅಪ್ಪ ನಿನ ಭಕ್ತರಾಗುವೆವು
||೧೫||
ಬಾಗೋಡಿ ಬಸವಣ್ಣ ಸಾಗುತಲಿ ಕಲ್ಯಾಣ
ಕೂಡಿಡಲು ಭೂಮಿ ಲಿಂಗಗಳ- ವೈಭವವ
ತೂಗುತಲಿ ಧರ್ಮ ತೊಟ್ಟಿಲವು
||೧೬||
ಬಸವ ಬೋಧೆಯು ಬೆಳೆದು ವಸುಧೆಯೊಳು ಹಬ್ಬುತಲಿ
ಹಸುಗೂಸು ಕೇಳಿ ಕಿವಿಗೊಟ್ಟು - ಚಣದೊಳಗೆ
ಹೊಸ ಮತವು ಉದಿಸಿ ಭೂಜನಕೆ
||೧೭||
ನಾಡ ಜಾಣರು ಬರಲು ಹೂಡುದಕೆ ವಾದಗಳು
ಕೂಡಿ ಕಲ್ಯಾಣ ಮಂಟಪಕೆ- ಮಾಚಯ್ಯ
ನೋಡಿ ಬಂದಲ್ಲಿ ತಲುಪಿದನು
||೧೮||
ಈರಾಡಿ ವೇದಗಳು ಹಾರಾಡಿ ವಾದಗಳು
ಜೋರಾಗಿ ನಡೆದು ನಿಲ್ಲುತಲಿ- ಸಾಗರವ
ಏರಿ ಕಡೆದಂತೆ ರಕ್ಕಸರು
||೧೯||
ಸುರರು ಕಡೆದಂತೆಲ್ಲ ವರಮಣಿಗಳುದಿಸಿದವು
ಚಿರಕಾಲ ಉಳಿದ ಭೂಮಿಯೊಳು - ವಚನಗಳು
ಶರಣಗಣ ಕಡೆದ ಮಣಿಯೇನೊ
||೨೦||
ವಾದ ಚಕಮಕಿ ಬೆಂಕಿ ದೂದಿ ಕೂಮುತ ಸುಡಲು
ವಾದಿಗಳ ಕಾದ ತಲೆಯಾರಿ-ವಚನಗಳ
ನಾದ ತುಂಬುತಲಿ ಭವಿಗಳಿಗೆ
||೨೧||
ಕಲ್ಯಾಣ ಮಂಟಪಕೆ ಬಲ್ಲವರು ಬಂದಿರಲು
ಅಲ್ಲಗಳೆಯುದಕೆ ಶರಣರನು -ಮಾಚಯ್ಯ
ಎಲ್ಲರೊಳಗವನು ಮಿಗಿಲಾದ
||೨೨||
ನೂರೊಂದು ತಲಗಳಿಗೆ ನೂರೆಂದು ಶರಣರನು
ವೀರ ಮಾಚಣ್ಣ ಕರವಾಳು - ಬಸವನಿಗೆ
ಧೀರ ಕಾಯಕದ ಹುರಿಯಾಳು
||೨೩||
ಶಿವ ಭಕ್ತರರಿವೆಗಳ ತವಕದಲಿ ತೊಳೆ ತರುವ
ಭಾವಿ ಜನರ ಮುಟ್ಟುವನೆ-ಮಾಚಯ್ಯ
ಜವಾನದವಡ್ಯಾಗ ಕೂಮತಕೆ
||೨೪||
ಬಸವಾದಿ ಪ್ರಮಥರ ಹಸನಾಗಿ ತೊಳೆದರಿವೆ
ಬಿಸಲಿಗೋಣ ಹಾಕಿ ಗಳಿಗೆಗಳ -ಹೊರಗೊಂಡು
ಬಸವನರಮನೆಗೆ ಬರುವಾಗ
||೨೫||
ಹೆಮ್ಮೆಯಲಿ ಕೊಬ್ಬಿರುವ ಹುಮ್ಮನರ ಪಾಪಿಗಳು
ತಮ್ಮ ತಮ್ಮೊಳಗೆ ಮಾತಾಡಿ- ಮಾಚನಿಗೆ
ಬಿಮ್ಮದಲಿ ತಡವಿ ಹಾದಿಯಲಿ
||೨೬||
ಹೊತ್ತ ಮುಟ್ಟಿಯೂ ತೋರಿ ಕತ್ತಿಯೊರೆಯಿಂದಿರಿದು
ಕತ್ತರಿಸಿ ತೋರಿ ಪಾಪಿಗಳ - ಮುಗಿಲೊಳಗೆ
ಎತ್ತ ನೋಡಿದರು ಕತ್ತಲೆಯು
||೨೭||
ಕಾಯಕವು ನೆನಪಾಗಿ ಮಾಯವಾಯಿತು ಸಿಟ್ಟು
ಜೀಯ ಬಸವನಿಗೆ ಸೇವೆಯನು-ತಪ್ಪಿಸಿದೆ
ಹೇಯವಿಲ್ಲವೆಂದು ಶಪಿಸುತಲಿ
||೨೮||
ಧೂಳ ಸಂಜೆಯ ಮುಂದೆ ಬೀಳುತೇಳುತ ಸಾಗಿ
ಕಾಲ ಜಂಗನ್ನು ಬಲು ನುಡಿಸಿ -ಮಾಚಯ್ಯ
ವೇಳೆಗರಮನೆಗೆ ತಲುಪಿದನು
||೨೯||
ಅರಸ ಬಿಜ್ಜಳರಾಯ ಹರುಷದಲಿ ವಾಲಗವ
ನೆರಸಿ ನಡೆಸಿದ್ದ ಚಾವಡಿಯ - ಕೇಳುದಕೆ
ಪಾರಸಿ ಕೂಡಿತ್ತು ಗಾವುದಕೆ
||೩೦||
ಹೇಳುವುದು ಕೇಳುವುದು ಆಳ್ವ ಭೂಪನೆ ಉಂಟು
ಮೇಳೈಸು ನಮ್ಮ ಕೋರಿಕೆಯ - ಪಿಸುಣಿಗರು
ಹೇಳ ತೊಡಗಿದರು ಕೈ ಮುಗಿದು
||೩೧||
ಮಿಗಿಲೆಂದು ಬಿಚ್ಚ್ಚಗತ್ತಿಯಲಿ-ಜನಕೊಂದು
ಒಗೆದಾಡಿ ಊರನಂಜಿಸುವ
||೩೨||
ಶರಣ ತಾನೆಂದೆಂಬ ತುರುಸು ಮಾತಿನ ಮಾಚ
ಮರೆಯುವನೆ ತನ್ನ ಒಣ ಹೆಮ್ಮೆ-ದೊರೆಗಳಿಗೆ
ಅರಸೆಂದು ಕರೆಯನವನೆಂದು
||೩೩||
ಅರಸ ಬಿಜ್ಜಳರಾಯ ಬಿರುಸು ಮಾತನು ಕೇಳಿ
ಕರೆಸಿ ಕೊಲ್ಲೆಂದು ಅಪ್ಪಣೆಯ- ಚಾರರಿಗೆ
ಸಿರವ ಕತ್ತರಿಸಿ ಬೆಲ್ಲೆಂದು
||೩೪||
ಜಟ್ಟಿಗಳ ಕರೆತರಿಸಿ ಜುಟ್ಟ ಹಿಡಿದೆಳತರಿಸಿ
ಕಟ್ಟಿ ಹೊಡೆದವನ ಬಿಗಿ ಹಾಕಿ- ನೀವೆಲ್ಲ
ಕುಟ್ಟಿ ನಾಡೆಂದ ಒಣಕಿಯಲಿ
||೩೫||
ಕೇಳಿ ಕಂಗಾಲಾಗಿ ಹೇಳಿದನು ಬಸವಣ್ಣ
ಕೀಳ ಕೆಲಸರಸ ಕೇಳೆಂದ -ಮಾಚಯ್ಯ
ಭಾಳಲೋಚನನ ಅವತಾರಿ
||೩೬||
ಬಸವನಾಡಿದ ಮಾತಾ ಕಸಕಿಂತ ಕಡೆ ಮಾಡಿ
ನಸುಕಿನಲಿ ಕಳಸಿ ಜಟ್ಟಿಗಳ-ಆನೆಗಳ
ಕಸ ತುಳಿಸಿದಂತೆ ತುಳಿಸುದಕೆ
||೩೭||
ಮರು ದಿನವೆ ನಸಕ್ಹರಿದು ಹರಸಿದನು ದಿನದೊಡೆಯ
ಶರಣ ಮಾಚನಿಗೆ ಬಲು ಬೆಳಕ -ಕಾಯಕದ
ಕಿರಣ ಬೆಳಗೆಂದ ಜಗಕೆಂದು
||೩೮||
ವೀರ ಘಂಟೆಯನಾದ ಕೇರಿ ಕೇರಿಗೆ ತಲುಪಿ
ಸಾರಿ ಮಾಚಯ್ಯನ ಬರುವನ್ನು-ಶರಣರಿಗೆ
ಬೀರಿ ಕಾಯಕದ ಹೊತ್ತನ್ನು
||೩೯||
ತಟ್ಟಲಾ ಮಾಚನಿಗೆ ಜಟ್ಟಿಗಳು ಬರಲಾಗ
ಬಟ್ಟ ಬಯಲಲ್ಲಿ ಎದುರಾಗಿ - ಮಾಚಯ್ಯ
ಗುಟ್ಟಿ ಲಘು ಮಂತ್ರ ಜಪಿಸಿದನು
||೪೦||
ಉಘೇ ಗುರು ಪ್ರಭುದೇವ ಉಘೇ ಭಕ್ತಿನಿಧಿ ಬಸವ
ಉಘೇ ಜ್ಞಾನಿ ಚೆನ್ನ ಬಸವನೆ -ಉಘೆಲಿಂಗ
ಉಘೇ ಶರಣರೆ ಲಿಂಗವಂತರೆ
||೪೧||
||೪೧||
ಹಿರಿಯರೇ ಸಲುಹಿರೈ ಕಿರಿಯ ಮಾಚನ್ನಿಂದು
ನರಭವಿಗಳೆನ್ನ ತಟ್ಟುವರು -ನಾಮುಂದೆ
ಕುರಿಗಳಿಗೆ ತಿಳಿಸಿ ಹರ ಮತವ
||೪೨||
ಸಿಟ್ಟಿನಲ್ಲಿ ಸಿಡಿಗುಂಡ ಬಿಟ್ಟು ಬಿಡದೆಲೆ ಕಾರಿ
ಸುಟ್ಟ ಜಟ್ಟಿಗಳ ಆನೆಗಳ- ಬಿಜ್ಜಳನು
ಬಿಟ್ಟ ನಿಟ್ಟುಸಿರ ನಿಂತಲ್ಲಿ
||೪೩||
ಪಟ್ಟದಾ ಮದಗಜವಾ ಬಿಟ್ಟ ಬಿಜಳರಾಯ
ರಟ್ಟಿಯಲಿ ಹಿಚುಕಿ ಎಳೆದೊಗೆದ-ಮಾಚಯ್ಯ
ಹುಟ್ಟಿದೀ ನರಲೋಕ ಕಲಿರುದ್ರ
||೪೪||
ಮಾರಿಮಸಿ ಹತ್ತುತಲಿ ದೂರ ಸರಿದಾಗರಸ
ನೀರ ಸಿಗದಂತೆ ಮಾಡುವೆನು-ಮಾಚನಿಗೆ
ಚಾರ ಕಾಲಿಯ ಜಲಕಿಡಿಸಿ
||೪೫||
ಅರಸನಪ್ಪಣೆಯನ್ನು ಸಿರಬಾಗಿ ಹೊತಗೊಂಡು
ಸರ್ರನೆ ಸಾಗಿದರು ಸೇವಕರು-ಕಾವಲೆಯು
ಬರದಂತೆ ಗುಂಗಿ ನೀರ್ಗೆರಿಗೆ
||೪೬||
ಪಟ್ಟಣದ ಕೆರೆತೊರೆಯ ಕಟ್ಟು ಕಾವಲಿಗಿಟ್ಟ
ತಟ್ಟಂತ ನೀರು ಸಿಗದಂತೆ-ಮಾಡಿದರು
ಕೆಟ್ಟ ಪಿಸುಣಿಗರು ಮಾಚನಿಗೆ
||೪೭||
ಮಡದಿಯನು ಕರಕೊಂಡು ಕಡು ಭಕ್ತ ಮಾಚಯ್ಯ
ಬಿಡದೆ ತಿರುಗಿದನು ಕೆರೆತೊರೆಯ -ಕಾವಲೆಯು
ನಡೆದಿತ್ತು ಎಲ್ಲಿ ಹೋದಲ್ಲಿ
||೪೮||
ಅಂಗದೊಳು ಬೆರತಿರುವ ಲಿಂಗವೇ ನೀಗತಿಯು
ಭಂಗವಾಗುವುದು ಕಾಯಕವು-ಹಿಪ್ಪರಗಿ
ಸಂಗ ನೀನೆನ್ನ ಸಲುಹಿಂದು
||೪೯||
ಹೊತ್ತು ಮುಣುಗುತ ಬಂತು ಬತ್ತಲೆಯ ಜಗಕೆಲ್ಲ
ಸತ್ಯ ನಂದಿಂದು ಹುಸಿಯಾತು -ಕಾಯಕದ
ಬುತ್ತಿ ತೀರಿತೈ ಈ ದಿನಕೆ
||೫೦||
ಮಾಚಯ್ಯನಾ ಮಡದಿ ಸೂಚನೀಯುತಲಿ
ಯಾಚನೆಯು ಬೇಡ ಪತಿದೇವ - ನೀನೆನ್ನ
ನಾಚದಲೆ ಹಿಂಡು ಎದೆರಗುತ
||೫೧||
ಊರ ಮುಂದಿನ ಸರವು ಯಾರ ಸುಳಿವೇ ಇಲ್ಲ
||೫೧||
ನೀರು ಸಿಗದಿನ್ನು ಪತಿದೇವ -ಎದೆರಗುತ
ನೀರಲರಿವೆಗಳ ತೊಳೆದ್ಹಾಕು
||೫೨||
ಹಡದಿ ಹಾಸಿದ ಮಾಚ ಮಡದಿಯೆದೆ ತಾಕೊಯ್ದ
ಒಡನೆ ಬಲು ಚಿಮ್ಮಿ ಬಿಸಿರಗುತ -ಹೊಳೆಯಾಗಿ
ಮಡುಗಟ್ಟಿ ನೀರ ಕರೆಯಾತು (ಕೆರೆಯಾಯ್ತು??))
||೫೩||
ನೀರ ಕಾಣುತ ಮಾಚ ತೀರಿಸಿದ ಕಾಯಕವ
ಆರಿಸರಿವೆಗಳ ಮಡಿಮಾಡಿ -ಕೂಗಿದನು
ಬಾರೆ ಸಂಗಡತಿ ತಡವಾತು
||೫೪||
ಬಸವಾದಿ ಪ್ರಮಥರಾ ಹಸನ ಪೂಜೆಗೆ ನಾವು
ನಸು ನಗುತ ಹೋಗಿ ತಲುಪೋಣ-ಸಮಯದಲಿ
ನೊಸಲಗಣ್ಣನಿಗೆ ಬಾಗುದಕೆ
||೫೫||
ಅನ್ನು ತನ್ನುತ ಮಾಚ ಮುನ್ನ ಮುನ್ನವೇ ಹೊರಟ
ಕಿನ್ನ ಕಿನ್ನರಿಯ ವೇಗದಲಿ-ಹೊರಗೊಂಡು
ಚೆನ್ನ ಬಸವರಿಗೆ ಶರಣೆಂದು
||೫೬||
ಮುನ್ನವೇ ಇದನರಿತ ಚೆನ್ನ ಬಸವಾದಿಗಳು
ನನ್ನೆಯಲಿ ಅಪ್ಪ ಮಾಚಯ್ಯ -ಬೀರಿದರು
ಉನ್ನತದ ಶರಣ ಮಂಟಪಕೆ
||೫೭||
ಅನುಭಾವ ಮಂಟಪಕೆ ಅನುನಯದಿ ಹಾಡುತಲಿ
ಬನವು ಕೂಗುತಲಿ ಮಾಚಯ್ಯ - ಶರಣೆಂದು
ಜನವಿಂದು ಭಜನೆ ಮಾಡುವದು
||೫೮||
ಮಡಿವಾಳ ಮಾಚಯ್ಯ ಧೃಢವುಳ್ಳ ಶಿವ ಭಕ್ತ
ಮಡದಿಯನು ಕೊಂದು ರಗುತದಲಿ -ತಾತೊಳೆದ
ಒಡೆಯನೊಸ್ತಿರವ ಭಕುತಿಯಲಿ
||೫೯||
ಪತಿಕಾಯಕ ಸೇರಿ ಮತಿವಂತಿ ಎದೆಗೊಟ್ಟು
ಗತಿಯ ಹೊಂದಿದಳು ಸಗ್ಗದಲಿ-ಶಿವಗಣವು
ಅತಿನುತಿಸಿ ಮಾನ ಸಲ್ಲಿಸಿತು
||೬೦||
ಮುತ್ತೈದಿ ನಿನ ಮರಣ ಎತ್ತ ಹೋದರು ಪೂಜೆ
ಕಸ್ತೂರಿನಾತವಿದ್ದಂತೆ -ಜಗದೊಳಗೆ
ಉತ್ತಮರ ಮನಕೆ ಕಾಯಕವು
||೬೧||
ಮುಂಬರುವ ಸ್ಥಿತಿಗತಿಗೆ ಕಂಬ ಮಾಚನೆ ಬೇಕು
ನಮ್ಬಿಗೆಯ ಧೀರ ಅವ ಬೇಕು-ಬಸವನಿಗೆ
ಮುಂದೆ ಕೂಡುದಕೆ ಶಿವಗಣಕೆ
||೬೨||
ಎಂದು ಹೇಳಿದ ಶಿವನು ಅಂದು ಕೂಡಿದ ಗಣಕೆ
ಇಂದು ಸರಿ ಉಂಟೆ ಸಗ್ಗದಲಿ-ಪೂಜಸಿರಿ (ಪೂಜಿಸಿರಿ??))
ಬಂದಿರುವ ಸತಿಗೆ ಕೈ ಮುಗಿದು
||೬೩||
ಹಡದಿ ಹಾಸಿದ ತಳವು ಮಡದಿಯಾನೆತ್ತರವು
ಮಡವು ಮಾಚಯ್ಯ ಕೆರೆಯೆಂದು -ಕಲ್ಯಾಣ
ಪಡುವಣಕೆ ಇಂದು ಮೆರೆಯುವುದು
||೬೪||
ಮರುದಿನವೇ ಬಿಜ್ಜಳನು ಕರೆ ಕಳಿಸಿ ಬಸವನಿಗೆ
ನರಪಾಪಿ ನನ್ನ ಉಳಿಸೆಂದು -ಕೈ ಮುಗಿವೆ
ಶರಣ ಮಾಚನಿಗೆ ಕ್ಚಮಿಸೆಂದು
||೬೫||
ದಂಡ ನಾಯಕ ಬಸವ ಬಂಡು ಆದೆನು ನಾನು
ಕಂಡ ಜನ ಮಾತ ಕಿವಿಕೊಟ್ಟು -ಪಿತ್ತೇರಿ
ಹೆಂಡ ಕುಡಿದಂಗೆ ಮಂಗನಿಗೆ
||೬೬||
ಮಂತ್ರಿ ಬಸವನೆ ಕೇಳು ತಂತ್ರಿಗಳ ಮಂತ್ರಗಳು
ಜಂತ್ರದಲಿ ತಲೆಯ ಕೊಟ್ಟಂತೆ -ಬೇಡಿನ್ನು
ತಂತ್ರದೊಡೆತನವು ಅರಸನಿಗೆ
||೬೭||
ಬಸವೇಶನಲ್ಲಮಗೆ ಹಸಗೆಟ್ಟಿತೀಕಾಲ
ಮಸಣವಾಗುವುದು ಕಲ್ಯಾಣ-ಇಲಿಂದ
ನುಸುಳುವುದೇ ಲೇಸು ಶರಣರಿಗೆ
||೬೮||
ವಿಕ್ರಮಾ ವರುಷದಲಿ ಹೊಕ್ಕೆವೀ ಕಲ್ಯಾಣ
ವಕ್ರ ರಾಕ್ಷಸವು ಬರಲಿಂದು -ಕಲಿಕಾಲ
ನಕ್ಕು ಶರಣರನು ನುಂಗುವುದು
||೬೯||
ಜಗದೇವ ಬೊಮ್ಮಯ್ಯ ಮಿಗಿಲಾದ ಮಾಚಯ್ಯ
ಬಗೆಸುವರು ಹಿತವ ಶರಣರಿಗೆ-ಬಿಜ್ಜಳನ
ನೆಗೆದು ಕೊಲ್ಲುವರು ಕದನದಲಿ
||೭೦||
ಅಮರ ಗಣಗಳ ಕೂಡಿ ಗಮನಿಸಿದ ಶರಣರಿಗೆ
ಮಮತೆಯಲಿ ಕರೆಸಿ ತಿಳಿಸಿದನು-ಬಸವಯ್ಯ
ನಮಿಸಿ ಸಂಗಮಕೆ ಸಾಗಿದನು
||೭೧||
ಬಸವ ಪಯಣದಿ ಕೇಳು ಮಸಣವೆನಿಸಿತು ಊರು
ಗಸನೆ ಆ ಸುದ್ಧಿ ಹರಡುತಲಿ-ಅರಸನಿಗೆ
ವಿಷ್ಯ ತಿಳಿಯಲಿಲ್ಲ ಎಲ್ಳಸ್ಟು
||೭೨||
ಬಸವನು ಚಿಂತಿಸುವ ವೆಸನದಲಿ ಮುಣಗಿರಲು
ಹೊಸ ಮಂತ್ರಿ ಚೆನ್ನ ಬಸವುಂಟು -ಬಿಜ್ಜಳಗೆ
ನಸುನಗುತ ನುಡಿಯೇ ವಾಲಗವು
||೭೩||
ಚೆನ್ನ ಬಸವನ ಕರೆಸಿ ಹೊನ್ನ ಕಡಗವ ಹಾಕಿ
ಇನ್ನು ಚೆನ್ನಬಸವ ದಂಡೇಶ-ಅರಸನಿಗೆ
ಸನ್ನುತಕೆ ಸಲಹೆ ಮಂತ್ರೀಶ
||೭೪||
ಖುಲ್ಲ ಬಿಜ್ಜಳರಾಯ ಬಲ್ಲವನು ಆಗುವನೆ
ಇಲ್ಲದಕೆ ಮತ್ತೆ ಕಿವಿಗೊಟ್ಟ -ಕೊಂಡಿಗಳು
ಅಲ್ಲಗಳೆಯುದಕೆ ಲಿಂಗಿಗಳ
||೭೫||
ಸಲ್ಲು ಸಲ್ಲಿಗೆ ಬಂಡು ಸಲ್ಲಾದ ಮಾತೆತ್ತಿ
ನಿಲ್ಲದಲೆ ಚಾಡಿ ಹೇಳಿದರು-ಬಿಜ್ಜಳಗೆ
ತಲ್ಲಣಿಸಿ ಎದೆಯು ದಿನದಿನಕೆ
||೭೬||
ಮೆಚ್ಚಿದನು ಮಧುವರಸ ಹೆಚ್ಚಿನವ ಹರಳೆಂದು
ನೆಚ್ಚಿತಾ ಮಗಳ ಕೊಡಲೊಪ್ಪಿ- ಬೀಗತನ
ಇಚ್ಚೆ ಮಾಡಿದನು ಹೊನನ್ನಿಗೆ
||೭೭||
ಹರಳ ಮಧುವರಸನಿಗೆ ಮರುಳ ಮಾಡಿದನೆಂದು
ಗರಳ ಸಿಟ್ಟಿನಲ್ಲಿ ಹಾರುವರು-ಬಿಜ್ಜಳಗೆ
ಕೆರಳಿ ಚಾಡಿಯನೆ ಹೇಳಿದರು
||೭೮||
ಹೊಳೆಯ ತಾ ಹರಳಯ್ಯ ಆಲಸಿ ಮಧುವರಸನಿಗೆ
ಹೊಲೆಯ ಹಚ್ಚಿದನು ಕುಲಕೆಲ್ಲ -ಎಳೆತರಿಸಿ
ಗಳುಪಿಸದೆ ಕಣ್ಣ ಕೀಳಿಸಿರಿ
|| ೭೯||
ಚೆನ್ನ ದಂಡಾದಿಪನು ಕುನ್ನಿ ಅರಸನಿಗೆಂದ
ಹೊನ್ನು ಶಿವಶರಣ ಹರಳಯ್ಯ-ಕುಲವುಂಟೆ
ಜೊನ್ನ ತಲೆಯವನ ಭಕ್ತಿರಿಗೆ
||೮೦||
ಹರನ ಭಕ್ತರ ಮಹಿಮೆ ಒರಗೆ ಹಚ್ಚುವದುಂಟೆ
ಪರಿಕಿಸಲು ಉಂಟೆ ಫಣಿರತ್ನ-ಜಗದೊಳಗೆ
ತರಕಿಸಲು ಉಂಟೆ ಶಿವ ಭಕ್ತಿ
||81||
ಪೆಂಗಿ ಬಿಜ್ಜಳ ಬೇಡ ನುಂಗುವುದು ಈ ಕಜ್ಜ
ಭಂಗವಾಗುವುದು ನಿನ ರಾಜ್ಯ-ಮನೆ ದೀಪ
ಇಂಗಿ ಹೋಗುವುದು ಕಡೆ ತನಕ
||82||
ಕೇಳದಲೇ ಬಿಜ್ಜಳನು ಹೇಳಿ ಎಳೆ ತರಿಸಿದನು
ಕೀಳಿಸಿದ ಕಣ್ಣ ನಿಂತಲ್ಲೆ-ನೋಡದಲೆ
ಹೋಳಾತು ಶಿವಶರಣರೂಳಿಗವು
||83||
ಮಾದರಸು ಹರಳಯ್ಯ ಹೋದ ದಿನ ಶಿನಡಿಗೆ
ಬೀದಿ ಬೀದಿಗಳು ಕಿಡಿಕಾರಿ -ಕಲ್ಯಾಣ
ಗಾದಿ ಹೌಹಾರಿ ತಳಮಳಿಸಿ
||84||
ಹೀನಗೆಲಸವ ಮಾಡಿ ಮಾನ ಪಡೆದೆನ್ನುತಲಿ
ನಾಣಿ ತನಗಾರು ಸರಿಯುಂಟೆ -ಜನದೊಳಗೆ
ಕಾಣೆಂಬ ಮಬ್ಬು ಮದವೇರಿ
||85||
ಅಂದು ಸಂಜೆಗೆ ಸಿವನೆ ಹೊಂದಿ ಮಂಟಪ ಕೂಡಿ
ಬಂಡ ಬವಣೆಯನು ಗಳೆಯುದಕೆ -ದಂಡೇಶ
ಸಂದಣಿಗೆ ಉಳವಿ ಸೇರೆಂದ
||86||
ಬಿಚ್ಹಗತ್ತಿಯ ಮಾಚ ಕೆಚ್ಚೆದೆಯ ಬಂಟನವ
ರೊಚ್ಹ ಬೊಮ್ಮಯ್ಯ ಜಗದೇವ-ನಿಮ್ಮಾಣೆ
ನುಚ್ಚು ಬಿಜ್ಜಳನ ಕಡಿಯುವೆವು
||87||
ಊಳಿಗವು ಹೊರಡುದಕೆ ನಾಳಿನಾ ಉದಯದೊಳು
ಕಾಳಗವು ಎಸಗೆ ಕೂಮತಕೆ-ಮಾಚಯ್ಯ ಹೇಳಿ ಸಜ್ಜಾದ ಕಾಳಗಕೆ
||88||
ಕಾಳರುದ್ರನು ಮಾಚ ಭಾಳಲೋಚನ ಭಕ್ತ
ಮೊಲ್ಲ ಬೊಮ್ಮಯ್ಯ ಜಗದೇವ-ಮನೆಹೊಕ್ಕು
ಸೀಳಿ ತಲೆಹೊಡೆದು ಬಿಜ್ಜಳನ
||89||
ಅಳಿಯ ಬಿಜ್ಜಳರಾಯ ಕೊಲೆಯ ಕೇಳುತಲೆದ್ದ ತಳಮಳಿಸಿ ಬಳಗ ಕೂಡಿಸಿದ-ದಂಡೆತ್ತಿ
ಉಳಿವೆ ಬಳಿಯವರ ತಡೆಗಟ್ಟಿ
||90||
ಕಾದರೊಳ್ಳಿಯ ಮುಂದೆ ಕಾದಿದರು ಜಂಗಮರು
ಕಾದಿ ಹಿಮ್ಮೆಟ್ಟಿ ಜೈನರನು -ಮುರಗೋಡ
ಹಾದಿಯೊಳು ಮುರಿದ ಮಾಚಯ್ಯ
||91||
ತುಂಡ ಜಂಗಮದಂಡು ದಂಡನಾಯಕ ಮಾಚ
ಕಂಡಕಂಡಲ್ಲಿ ವೈರಿಗಳ- ಚೆಲ್ಲಿದರು
ಚಂಡು ಕಳೆಕೊಂಡ ಮುರಿದ ಮಾಚಯ್ಯ
||92||
ಬೆನ್ನ ಹತ್ತಿದ ವೈರಿ ತಣ್ಣಗಾಯಿತು ಚೆದರಿ
ಮಣ್ಣಗೂಡಿಸಿದ ಮಾಚಯ್ಯ-ಕೈಯೆತ್ತಿ
ಚಿನ್ಹವುಳಿಸಿದನು ಲಿಂಗಿಗಳ
||93||
ಹರಭಜನೆ ಗುರುಸೇವೆ ಉರುತರದಿ ಮಾಡುತಲಿ
ಶರಣಗಣ ಕೂಡಿ ಉಳಿವೆಯೊಳು -ಮರುದಿನವೆ
ಮರೆಸಿದರು ತತ್ವಮಂಟಪವ
||94||
ಚೆನ್ನಬಸವೇಶ್ವರನು ಉನ್ನತನುಭಾವಿಗಳು
ಚಿನ್ನಮಯವಾತು ಆ ಉಳಿವೆ- ಲಿಂಗಿಗಳ
ಕನ್ನೆ ಭಕ್ತಿಯಾ ಗೂಡಾತು
||95||
ಹರಣ ಭಕ್ತರ ಮಹಿಮೆ ಮರನದಲಿ ನೋಡೆಂದ
ಕರುಣೆಯಲಿ ಕಾಣೊ ಗುರುಭಕ್ತಿ-ಮಾಚನಿಗೆ
ಹರಸುತಲಿ ಹಾಡಿ ಶಿವಲೋಕ
||96||
ಶಿವನೆ ಶಿವದೋಹರನೆ ಭವದೊಳಗೆ ಬೇಡಿನ್ನು
ತವಕದೊಯ್ಯಂದ ಮಾಚಯ್ಯ-ಹಿಪ್ಪರಗಿ
ಗವಿಯ ಸಂಗನೊಳು ಒಂದಾದ
||97||
ಹೂವಿನಾ ಮಳೆಗರೆದು ಹೂವಿನಾ ರಾಶಾಗಿ
ದೇವ ಹಿಪ್ಪರಗಿ ಹೆಸರಾಗಿ - ಸಗ್ಗದಲಿ
ಹೂವಾದ ಮಾಚ ಶಿವಪದಕೆ
||98||
ಶರಣ ಮಡಿವಾಳನಾದ ಕರಿಬಂಟ ಕಣದೊಳಗೆ
ಹರಳಾದ ಕಣಕೆ ಬಿಳಿ ಬಂಟ ಅಲ್ಲಮನು
ಗುರುಬುದ್ಧಿವಂತ ಲಿಂಗಾದ
||99||
ಹೊನ್ನೀಯ ಹುಳದಂಗ ಮುನ್ನೂರು ದೀವಟಗಿ
ಹೊನ್ನ ಹಿಪ್ಪರಗಿ ಬೈಯಲಾಗ- ಮಾಚಯ್ಯ
ಬನ್ನೀಯ ಮುಡಿದು ಬರತಾನೊ
||100||
ಹಂತಿಯದು ಹಾಡೆಂದು ಪಂತಕಟ್ಟಲು ಬೇಡ
ಕಂತಿಕರಗವುದುದು ನಿಂತಲ್ಲೆ -ಮಾಚಯ್ಯ
ಕುಂಟು ಎದೆಯೊಳಗೆ ಹಾಡಿಸಿದ
||101||
ಶರಣು ಶರಣೆಂಬುವೆವು ಹರಣ ಹಾರುವ ತನಕ
ಕರುಣಿಸರಿ ಶರಣ ಮಾಚಯ್ಯ-ನಮಗಿನ್ನು ಹರಸರಿ ಹುಲಿಸು ಹುಲ್ಹುಲ್ಲಿಗೊ
>>>> ಇಲ್ಲಿಗೆ 'ಜನಪದ ತ್ರಿಪದಿಗಳಲ್ಲಿ ಮೂಡಿ ಬಂದ ಮಡಿವಾಳ ಮಾಚಿದೇವರು' ಬರಹ ಮುಕ್ತಾಯವಾಯಿತು...
ಮಡಿವಾಳ ಮಾಚಿದೇವರ ಬಗ್ಗೆ ಇನ್ನಸ್ಟು ಮಾಹಿತಿಯನ್ನು ಸ್ಕ್ಯಾನ್ ಮಾಡಿ ಇಲ್ಲಿಗೆ ಸೇರಿಸುವೆ-ಗಮನಿಸಿ -ಎಲ್ಲರಿಗೂ ಈ ಪೇಜ್-ಬ್ಲಾಗ್ ಬಗ್ಗೆ ತಿಳಿಸಿ-ಮಡಿವಾಳ ಬಂಧುಗಳಿಗೆ ನಮ್ಮ ಕುಲ ಮೂಲ ಮಹಾ ಪುರುಷರ ಬಗ್ಗೆ ತಿಳಿಯುವ ಹಾಗೆ ಮಾಡಿ...
ಸರ್ವ ಮಡಿವಾಳ ಬಂಧುಗಳಿಗೆ ಶುಭ ಸಂಜೆ...
ಶುಭವಾಗಲಿ..
*****ಜೈ ಶ್ರೀ ವೀರ ಘಂಟಿ ಮಡಿವಾಳ ಮಾಚಿದೇವ********
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ